ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಗಾರ
ಲೇಖಕರು : ಕೋಟ ಸುದರ್ಶನ ಉರಾಳ
ಗುರುವಾರ, ಆಗಸ್ಟ್ 21 , 2014
|
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಶ್ರೀ ದಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್, ಕಿರಿಮಂಜೇಶ್ವರ ಕುಂದಾಪುರ ಇವರ ಸಹಯೋಗದೊಂದಿಗೆ 23-07-2014 ರಿಂದ 01-08-2014 ರ ತನಕ ಕಿರಿಮಂಜೇಶ್ವರ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಇಂದಿಗೆ ಉಪಯುಕ್ತವಾದ ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರಕ್ಕೆ ಹತ್ತು ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದಾರೆ. ಇವರಲ್ಲಿ ಪ್ರಮುಖವಾದ ಕಾರವಾರ ಜಿಲ್ಲೆಯ ಹಳಸೆಮಕ್ಕಿಯ ರಾಮ ಹೆಗಡೆ ಮೂರೂರುರವರು.
|
ಮರದ ಯಕ್ಷಗಾನದ ಆಭರಣ ತಯಾರಿಸುವ ಭಾವಚಿತ್ರ.
|
ವೇಷಭೂಷಣಗಳ ವಿಚಾರದಲ್ಲಿ ಬಡಗುತಿಟ್ಟಿನಲ್ಲಿ ಬಹಳಷ್ಟು ಭಿನ್ನತೆಯನ್ನು ಕಾಣಬಹುದಾಗಿದೆ. ಬಡಗುತಿಟ್ಟಿನಲ್ಲಿ ಪ್ರಮುಖವಾಗಿ ಗಮನ ಸೆಳೆಯುವ ಕೇದೆಗೆ ಮುಂದಲೆ ವೇಷ, ಕಿರೀಟ ವೇಷ, ಬಣ್ಣದ ವೇಷ, ಹೆಣ್ಣು ಬಣ್ಣದ ವೇಷ, ಮುಂಡಾಸು ವೇಷ ಮತ್ತು ಸ್ತ್ರೀವೇಷಗಳಿಗೆ ಅದರದೇ ಆದ ವೇಷಗಾರಿಕೆಯ ಕ್ರಮವಿದೆ. ಕಳೆದ 50 ವರ್ಷಗಳಿಂದ ರಾಮ ಹೆಗಡೆಯವರು ವೇಷ ಭೂಷಣ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂದು ಕೆಲವು ಮೇಳದಲ್ಲಿ ಇವರು ತಯಾರಿಸಿಕೊಟ್ಟ ವೇಷ ಭೂಷಣವೇ ಇರುವುದು. ಇದರ ಜೊತೆಗೆ ಯಕ್ಷಗಾನ ನೃತ್ಯ ಭಾಗವತಿಕೆಯನ್ನು ಹೇಳಿಕೊಡುತ್ತಾರೆ. ಇಂದು 200ಕ್ಕೂ ಹೆಚ್ಚು ಇವರ ಶಿಷ್ಯರು ಯಕ್ಷಗಾನದಲ್ಲಿ ಇದ್ದಾರೆ. ಭಾಗವತ ಸುಬ್ರಹ್ಮಣ್ಯ ದಾರೇಶ್ವರರು ಈವರೆಗೆ ನಡೆದಿಲ್ಲದ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಾಗಾರವನ್ನು ನಡೆಸಿದ್ದಾರೆ. ಅವರಿಗೆ ತುಂಬಾ ಧನ್ಯವಾದಗಳು ಎಂದು ರಾಮ ಹೆಗಡೆಯವರು ಸ್ಮರಿಸುತ್ತಾರೆ. ಈ ಕಾರ್ಯಾಗಾರಕ್ಕೆ 20-25 ಜನ ಆಸ್ತಕರು ಉಪಯೋಗ ಪಡೆದರು.
ಇಲ್ಲಿ ರಾಜವೇಷದ ಕಿರೀಟ, ವೀರಗಸೆ, ಮುಂದಲಿ, ಎದೆಹಾರ, ಭುಜಕೀರ್ತಿ, ಕರ್ಣಪಾತ್ರ, ಕ್ಯಾದಿಗೆ, ಮುಡಿ ಕ್ಯಾದಿಗೆ, ಕೈಕಟ್ಟು, ಒಡ್ಯಾಣ, ಸ್ತ್ರೀವೇಷ ಒಡ್ಯಾಣ, ಹೀಗೆ ಪ್ರತಿಯೊಂದನ್ನು ಮೂರೂರು ರಾಮಹೆಗಡೆಯವರು ಹೇಳಿಕೊಡುತ್ತಾರೆ. ನಾಜೂಕಿನ ಮರದ ಕೆತ್ತನೆಯ ಹಲ್ಲೆಗಳು, ಭುಜಕೀರ್ತಿಯ ಮುಳ್ಳುಗಳು, ಕಿರೀಟದ ವಿನ್ಯಾಸವನ್ನು ಅವರು ತಯಾರಿಸುವುದನ್ನು ನೋಡುವುದೇ ಅಂದ.
ಯಾವ ಕಲಾಪ್ರಕಾರದಲ್ಲೂ ಕಾಣಸಿಗದ ವೇಷಭೂಷಣ ಇಂದು ಬಡಗಿನ ವೇಷದಾರಿಗಳು ಒಂದು ಪ್ರಸಂಗದಲ್ಲಿ ವೇಷ ಮಾಡಲು 1,000 ರೂ. ನಿಂದ 5,000 ರೂಪಾಯಿಯವರೆಗೆ ಸಂಭಾವನೆ ತೆಗೆದುಕೊಳ್ಳುವವರಿದ್ದಾರೆ. ಆದರೆ ರಾಮ ಹೆಗಡೆಯವರು ಒಂದು ಕಿರೀಟ ತಯಾರಿಸಲು 1 ರಿಂದ 10 ದಿವಸ ಬೇಕು. ಕಿರೀಟದ ಬೆಲೆ 4,000 ದಿಂದ 5,000 ರೂಪಾಯಿ ಎನ್ನುತ್ತಾರೆ. ಈ ದೆಸೆಯಲ್ಲಿ ವೇಷಭೂಷಣ ತಯಾರಿ ಮತ್ತು ರಿಪೇರಿ ಮಾಡುವವರೇ ವಿರಳ ಎನ್ನುತ್ತಾರೆ ರಾಮ ಹೆಗಡೆಯವರು.
ಈ ಹತ್ತು ದಿನದ ಕಾರ್ಯಾಗಾರದಲ್ಲಿ
- ಹಗುರವಾದ ಮರದಿಂದ ಕಿರೀಟ ತಯಾರಿಸುವ ವಿಧಾನ.
- ಕ್ಯಾದಿಗೆ ಮಾಡುವ ವಿಧಾನ (2ಳಿ, 3ಳಿ, 2 ರಿಂದ 3ಳಿ ಇಂಚು 4 ಇಂಚಿನ).
- ಮುಡಿ ಕ್ಯಾದಿಗೆ ಮಾಡುವ ವಿಧಾನ.
- ತುಂಬಾ ತಾಳ್ಮೆಯಿಂದ ಮಾಡುವಂಥ ಮುಂದಲೆ ಮಾಡುವ ವಿಧಾನ.
- ಕರ್ಣಪಾತ್ರ ಮಾಡುವ ವಿಧಾನ ( 9 ಇಂಚು ಉದ್ದ 2ಳಿ ಇಂಚು ಅಗಲ ಱ ಇಂಚು ದಪ್ಪದ ಹಲಗೆಯನ್ನು 4ಳಿ ಇಂಚಿಗೆ ಕತ್ತರಿಸಿಕೊಂಡು ಅದನ್ನು ಕೆತ್ತನೆಯೊಂದಿಗೆ ಗ್ಲಾಸ್ ಕೂಡಿಸುವ ಕ್ರಮ.
- ಭುಜ ಕೀರ್ತಿ ಮಾಡುವ ವಿಧಾನ.
- ಎದೆಹಾರ ಮಾಡುವ ವಿಧಾನವನ್ನು ಹೇಳಿಕೊಡುವುದರ ಜೊತೆಗೆ ಬ್ಯಾಗಡೆ ಮಾಡುವ ವಿಧಾನ, ಗ್ಲಾಸ್ ಕೂಡಿಸುವ ವಿಧಾನ, ವೀರಗಸೆ, ಎದೆಹಾರಕ್ಕೆ ಉಲ್ಲನಿನ ಗೊಂಡೆ ಮಾಡುವ ವಿಧಾನ ಅಲ್ಲದೇ ಇಂದು ನಶಿಸಿ ಹೋಗುತ್ತಿರುವ ಕೇದಗೆ ಮುಂದಲೆಯ ಅಟ್ಟೆ ಮಾಡುವ ವಿಧಾನ ಮತ್ತು ಕಟ್ಟಿಕೊಳ್ಳುವ ತರಬೇತಿಯನ್ನು ನೀಡಿದ್ದಾರೆ.
ಇಂತಹ ಉಪಯುಕ್ತವಾದ ಬಡಗುತಿಟ್ಟಿನ ವೇಷಭೂಷಣ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರಾಮ ಹೆಗಡೆ ಮೂರೂರು, ಗಣಪತಿ ಹೆಗಡೆ ಮೂರೂರು, ಕೃಷ್ಣ ಹೆಗಡೆ ಮೂರೂರು, ಅಶೋಕ್ ಭಟ್, ನಾಗರಾಜ್ ದೇವಲಮಕ್ಕಿ, ಪ್ರಭಾಕರ ಹಾನಗಲ್, ಪುರಂದರ ನಾಯಕ್, ನರಸಿಂಹ ಗಾಂವ್ಕರ್, ಉದಯ ಕುಮಾರ್ ತೋಟಾಡಿ, ಪ್ರಶಾಂತ್ ನಾಯಕ್ರವರು ಭಾಗವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದೊಂದಿಗೆ ಮತ್ತುಭಾಗವತ ಸುಬ್ರಹ್ಮಣ್ಯ ದಾರೇಶ್ವರರವರ ಸಾರಥ್ಯದಲ್ಲಿ ಉಪಯುಕ್ತವಾದ “ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಗಾರ.
****************
ಕಾರ್ಯಾಗಾರದ ಕೆಲವು ಭಾವಚಿತ್ರಗಳು
ಕೋಟ ಸುದರ್ಶನ ಉರಾಳರೊಂದಿಗೆ ಮಾತಿಗೀಳಿದ ಮೂರೂರು ರಾಮ ಹೆಗಡೆಯವರು
|
|
|